Saturday, May 25, 2019

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು
ಕಾಯುತಿತ್ತು ಹೆಣ ಸುಡಲು
ನೆಲವ  ಅಗೆದು ಯಾರೋ
ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು
ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು
ವಿವಿಧ ಭಕ್ಷ್ಯ 
ಹೆಣದ ಮಾಂಸದ ಜೊತೆಗೆ .

ಕಾಯದೊಳಗಿದ್ದ ಜೀವ
ಮಾಯವಾಗಿತ್ತು,
ಈಗ ಅದು ಆಕಾಶಕಾಯ
ಚೇತನ-ಸಂಭ್ರಮ
ಜಡ-ಯಾತನೆ.

ಅಳಲು ಕಣ್ಣಿಗೊಂದು ಕಾರಣ
ಸಾವು ಸಾಧಾರಣ .
ಕಣ್ಣೀರಿಗೆ ಕೊನೆಯಿಲ್ಲ
ಅದಕ್ಕೆ ಜಾಸ್ತಿ ಬೆಲೆಯಿಲ್ಲ.

ಹೊತ್ತು ಸಾಗಿದೆ, ಸಂಜೆ ಮಾಗಿದೆ.
ಅತ್ತಿತ್ತ ಎತ್ತಿ ನಡೆದರು,
ಚಿರ ಶಾಂತಿ,ವಿಶ್ರಾಂತಿ.
ಬೆಂಕಿ ಇಟ್ಟರು
ಅಗ್ನಿಗೆ ಭೂರಿ-ಭೋಜನ
ಸ್ವರ್ಗಾವರೋಹಣ.

ಸೂರ್ಯ ಪಡುವಣ ಕಡಲಿಗೆ ಇಳಿದ
ದಿನದ ಸೂತಕ ಕಳೆಯಲು.
ಅತ್ತವರ ಕಣ್ಣೀರು
ಕೆನ್ನೆಯ ಪ್ರಪಾತದಲ್ಲಿ ಇಂಗುತಿತ್ತು,
ಬಂಧುಗಳು ಬಂದವರು ಹೋದರು
ಮನೆಯೊಳಗೆ ಗಾಳಿ
ಸುಟ್ಟ  ವಾಸನೆ ಒರೆಸುತಿತ್ತು .

ಪ್ರಶ್ನೆಯೊಂದು ಕಾಡುತಿತ್ತು ಕವಿಗೆ:
ಹುಟ್ಟಿನ ಜೊತೆ ಸಾವು ಹುಟ್ಟಿತೆ ??
ಸಾವಿನ ಜೊತೆ ಹುಟ್ಟು ಹುಟ್ಟಿತೆ ??
ಅಳಲೇ ..... ??ಸಂಭ್ರಮಿಸಲೇ ...... ??


----------------------------------------------------------------------------------------------ಸುಕೇಶ್ ಪೂಜಾರಿ






Saturday, December 22, 2018

ಬೆಳಕು


             ೧
ಬೆಳಕು ತಾನು
ಕಳೆದುಹೋದಂತೆ ನಟಿಸಿತು
ಕತ್ತಲೆಯ ವೇಷಧರಿಸಿ, ಒಂದಷ್ಟು ಹೊತ್ತು.
ಯಾರೋ ದೀಪ ಹಚ್ಚಿದರು
ವೇಷ ಬಯಲಾಯಿತು,ಬದಲಾಯಿತು
ಜಗದ ನಾಟಕ
ಹೀಗೆ ನಡೆಯುತಿತ್ತು.

         ೨
ಬೆಳಕಿನ ಒಳಗೆ ಇರುಳು
ಇರುಳಿನ ಉರುಳಿನೊಳಗೆ ಬೆಳಕು
ಕಪ್ಪು-ಬಿಳುಪು ಬಣ್ಣಗಳ ಆಚೆ
ಕಣ್ಣ ಹೊರಳಿಸಿದರೆ
ಎಲ್ಲ ಅರಳು-ಮರಳು
ಜಗದ ನಿಯಮದ ತಿರುಳು

          ೩
ಬೆಳಕಿನ ಮುಂದೆ
ಓಡುತಿತ್ತು ಕರಿಛಾಯೆ
ಮೋಹ ಮಾಯೆ,
ಕೈಯಲ್ಲಿ ಹಿಡಿದು ದೀವಟಿಗೆ
ಕರೆದಂತಾಯಿತು ಯಾರೋ ತನ್ನೆಡೆಗೆ
ಈಗ ನಿನ್ನೆಯವರೆಗೆ ಸುತ್ತುತಿದ್ದ
ಸೊನ್ನೆಯ ಬಿಂದು
ಅನಂತತೆಯಲ್ಲಿ ಒಂದು.



-------------------------------------------------------------ಸುಕೇಶ್ ಪೂಜಾರಿ (ಸುಕೇಪು)

Monday, November 12, 2018

ಇದೇಕೆ ಹೀಗೆ?

ಕೆಲವೆಡೆ ಮೂರು ಹೊತ್ತು ಉಣ್ಣಲು
ಚಿನ್ನದ ಬಟ್ಟಲು.
ಇನ್ನು ಕೆಲವೆಡೆ
ಮುರಿದ ಕೈ ತೂಗುತ್ತಿದೆ
ದಾರಿದ್ರ್ಯದ ತೊಟ್ಟಿಲು .
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಕೆಲವರು ಎಲ್ಲ ಬಲ್ಲವರು
ತಲೆ ಸರಸ್ವತಿಯ ಮನೆ,
ಜ್ಞಾನ,ಚಿಂತನೆ ವಿಚಾರ.
ನಾವು-ನೀವೋ , ಏನು ಬಲ್ಲಿರಿ ?
ಅಜ್ಞಾನ, ಚಿಂತೆ, ಸಾಮಾನ್ಯ ವ್ಯವಹಾರ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಆಗೋ ಅಲ್ಲಿ ನೋಡಿ,
ಆ ಸೌಂದರ್ಯ,ಮೈ ಬಣ್ಣ,
ಅಪರಂಜಿ , ಹುಣ್ಣಿಮೆಯ ಜಾತ್ರೆ.
ಇಗೋ ಇತ್ತ ಕಣ್ಣು ಹಾಯಿಸಿ,
ತೂಕವಿಲ್ಲದ ದೇಹಕ್ಕೆ
ಬಣ್ಣಕ್ಕೆಲ್ಲಿ ಕಾಂತಿ.
ಕಣ್ಣ ಬೊಂಬೆಯ ಸುತ್ತದ ಬಿಳಿಯು
ಬದಲಾಗುತ್ತಿದೆ,
ಬದುಕು ನಡುಇರುಳ ಯಾತ್ರೆ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಅಲ್ಲಿ ದಷ್ಟ -ಪುಷ್ಠ ಮಾಂಸಖಂಡಗಳು ,
ತಿಂದುದನು ಕರಗಿಸುವುದಕೆ
ಓಡುವ ಜನ.
ಪ್ರದರ್ಶನ ,ಮೆಡಲ್ ಗಳು
ಅದಕೊಂದು ಪ್ರಮಾಣ ಪತ್ರ .
ಇಲ್ಲಿ ಎಲುಬುಗಳ ಪ್ರದರ್ಶನ ,
ಹೊತ್ತನ್ನದ ಊಟಕ್ಕೆ
ಮುಗಿಯುವುದು ದಿನದ ಗಡಿಯಾರದ ಓಟ,
ಜೊತೆಗೆ ಸವೆದ ಸವೆದ ಚಪ್ಪಲಿ
ಚಿಂದಿ ಬಟ್ಟೆಗಳು ಮಾತ್ರ.
ಇದೇಕೆ ಹೀಗೆ ?,ಇದೇಕೆ ಹೀಗೆ ?.

ಒಂದೆಯಾದರೆ ಸೃಷ್ಟಿಯ ಮೂಲ 
ಎಂತಿಣಿತು ವೈರುದ್ಯ ?
ಇಷ್ಟೊಂದು ವೈವಿಧ್ಯ ?
ಎಳೆದು ಬಿಟ್ಟಿದ್ದರೆ ಆತ,
ಸಮಾನತೆಯ ಗೆರೆ . 
ಹುಟ್ಟುತಿತ್ತೆ ಪ್ರಶ್ನೆ 
ಇದೇಕೆ ಹೀಗೆ ?,ಇದೇಕೆ ಹೀಗೆ ?.
ಎಲ್ಲದಕ್ಕೂ ಅದರದೆ ಇತಿಮಿತಿ 
ಸೃಷ್ಟಿಕರ್ತನ ಪರಿಮಿತಿ . 




                                                                                                           ಸುಕೇಶ್ ಪೂಜಾರಿ 





Monday, November 5, 2018

ಇದು ಕನಸಲ್ಲ

 ಒಂದಿರುಳು ಕನಸ ಕಂಡೆ
ಜಗದಗಲದ
ಜೀವಸಂಕುಲಗಳೆಲ್ಲ ಮುಗಿದು,
ಭೂಮಿಯೊಳಗೆ ಹುಗಿದು,
ಭೂಮಿ, ಅಂತರಿಕ್ಷದಲ್ಲಿ ಸಿಡಿದು,
ಅಂತರಿಕ್ಷ, ಬ್ರಹ್ಮಾಂಡಗಳು
ನಿನ್ನೊಳೊಂದಾಗುದ ಕಂಡೆ.
ನಾನು ಅಳುತಿದ್ದೆ,
ಸೃಷ್ಟಿ ಮುಗಿದುದಕ್ಕೆ .
ನೀನು ಮುಗುಳ್ನಗುವುದ ಕಂಡೆ ,
ಮತ್ತೊಂದು ಹೊಸ ಸೃಷ್ಟಿಯ ಸಂಭ್ರಮಕೆ.
ಹೌದು, ಎಲ್ಲ ಮುಗಿದ ಮೇಲೆ
ನಾ ಹೇಗೆ ನಿನ್ನ ಕಂಡೆ ??.
ಬಹುಶ: ನೀ ನನ್ನ ಕಂಡೆ !!.

--------------------------------------------------------------------------------ಸುಕೇಶ್ ಪೂಜಾರಿ 

Saturday, November 3, 2018

ಸವತಿಯ ಕನಸು !!!!.

ನನಗೆ ನಿದಿರೆಯ ಮೇಲೆ ಮುನಿಸು
ನಿನ್ನೆಯ ಅರ್ಧ ಕನಸ
ಕಾಣುವ ಮನಸು.
ಕೆಂಬಣ್ಣದ ಗುಲಾಬಿಯ
ಬಣ್ಣಗಳ,
ಸಂಪಿಗೆಯ ಸೌಗಂಧಗಳ,
 ಮೈ ಮೇಲೆ ಮೆತ್ತಿ,
ಸುಕೋಮಲೆ ನೀ,
ಹಾಗೆ ನಡೆದು ಬಂದಾಗಲೇ
ಬೆಳಕಾಗಬೇಕ,
ಕೋಳಿ ಕೂಗಬೇಕ.!!.

ಕೈಯಲ್ಲಿ ಹಿಡಿದ
ಲಾಂದ್ರದ ಬೆಳಕು
ನಾಚುತ್ತಿದೆ ನೋಡಿ
ಸೊಂಟದ ಬಳುಕು .
ಕಾಡಿಗೆಯದೇನೋ ಬೇಡಿಕೆ ,
ಕಣ್ಣು ಅದ ಹುಡುಕಾಡುತ್ತಿದೆ .

ದಾರಿ ನಿನ್ನಯ ಹೆಜ್ಜೆಯ
ಸದ್ದಿಗೆ
ದಿಕ್ಕು ತಪ್ಪಿದೆ
ಕಣ್ಣು , ನಿನ್ನ ಕಾಣಲೇ ಬೇಕೆಂಬ
ಹಠಕ್ಕೆ ಜೋತುಬಿದ್ದಿದೆ .
ಇನ್ನೇನೊ ನೀ 
ನನ್ನೊಡನೆ ಬಂದು ಕೂರಬೇಕು
ಎನ್ನುವಷ್ಟರಲ್ಲಿ
ಬೆಳಕು ಹರಿದಿದೆ
ಹೊದಿಕೆ ಸರಿದಿದೆ .

ಇಂದು ಮತ್ತೆ ,
ನಿದಿರೆಗೆ ನನಮೇಲೆ ಮುನಿಸು,
ನನಗೆ ಆಕೆಯ ಸವತಿಯ ಕನಸು !!!!.



------------------------------------------------------------------------------ಸುಕೇಪು

Wednesday, October 31, 2018

ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಧ್ವಜಯಾವುದು ??

ಇನ್ನೇನು ಸ್ವಲ್ಪ ದಿವಸದಲ್ಲೇ ಕನ್ನಡ ರಾಜ್ಯೋತ್ಸವ ಬರುತ್ತದೆ . "ಹ್ಯಾಪಿ ಕನ್ನಡ ರಾಜ್ಯೋತ್ಸವ" ಎಂದು english ನಲ್ಲಿ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕನ್ನಡ ಅಭಿಮಾನವನ್ನು ತೇಲಿಬಿಡುವವರಿಗೆ (ಹೇಳಿಬಿಡುವವರಿಗೆ!!) ಏನೂ ಕಡಿಮೆ ಇಲ್ಲ. ಇದು ಬರಿ ಕನ್ನಡ ರಾಜ್ಯೋತ್ಸವಕ್ಕಷ್ಟೇ ಸೀಮಿತವಲ್ಲದ ಸಮಸ್ಯೆ , ಹಬ್ಬ ಸಂಸ್ಕೃತಿ ,ಆಚರಣೆಗಳು  ಮತ್ತು ಯಾವುದೇ ಉತ್ಸವದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದಿದ್ದರು ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಗಳು ಮಾತ್ರ ತಪ್ಪದೆ ಬದಲಾಗುತ್ತದೆ. ಸರಿ ಅಷ್ಟಾದರು ಮಾಡುತ್ತಾರಲ್ಲ ಎಂದು ಸಮಾಧಾನ ಮಾಡಿಕೊಳ್ಳಬೇಕು ಅಷ್ಟೇ .

ಮೊನ್ನೆ ನನ್ನ ಕಛೇರಿಯಲ್ಲಿ ನೆರೆ ರಾಜ್ಯದ ಹುಡುಗನೊಬ್ಬ ನನ್ನ ಗೆಳೆಯನಲ್ಲಿ  ಕೇಳಿದ ( ಆಂಗ್ಲ ಭಾಷೆಯಲ್ಲಿ ) "ನಿಮ್ಮ ಧ್ವಜದಲ್ಲಿ ಆ ಎರಡು ಬಣ್ಣಗಳು ಯಾವುದರ ಸಂಕೇತ ? ನಮಗಿಲ್ಲದ ವಿಶೇಷ  ಧ್ವಜ ನಿಮಗೆ ಯಾಕೆ ಬೇಕಾಯಿತು ?" ಈ ಅನಿರೀಕ್ಷಿತ ಪ್ರಶ್ನೆಗೆ ಗೆಳೆಯ ತಬ್ಬಿಬ್ಬಾಗಿದ್ದ. ನೆರೆ ರಾಜ್ಯದವರು ಯಾರೋ ನಿಮಗೆ  ಈ ಪ್ರಶ್ನೆ ಕೇಳಿದರೆ ನಿಮಗದರ ಉತ್ತರ ಗೊತ್ತೇ ?. ನಾನು ಹಾಗೆ  ಒಂದು ಕ್ಷಣ ಯೋಚಿಸಿದೆ, " ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಬಣ್ಣ, ಅರಶಿನ ಮತ್ತು ಕುಂಕುಮ. ಯಾವುದೇ ಶುಭ ಸಂಭ್ರಮಕ್ಕೆ ನಾವು ಅದನ್ನು ಉಪಯೋಗಿಸುತ್ತೇವೆ ,ಅದು ನಮ್ಮ ಸಂಪತ್ತು ಮತ್ತು ಸೌಭಾಗ್ಯದ ಸಂಕೇತ " ಎಂದೆ .
೧೦ ಅಂಕದ ಪ್ರಶ್ನೆಗೆ ೧ ಅಂಕದ ಉತ್ತರ ಕೊಟ್ಟಂತೆ . ಆ ಕ್ಷಣ ಆತನ ಮುಂದೆ ತೇರ್ಗಡೆ ಆಗಬೇಕಿತ್ತು. ಇಲ್ಲದಿದ್ದರೆ ಗೊತ್ತಿಲ್ಲವೆಂದು ತಲೆ ತಗ್ಗಿಸಬೇಕಿತ್ತು . Nice .. !! ಎಂದ ಆತ ಮುಗುಳ್ನಗುತ್ತ . ಬೀಸೋ ಚಾಟಿ ತಪ್ಪಿಸಿಕೊಂಡದ್ದಾಯಿತು ಆದರೆ ತಲೆಯೊಳಗೊಂದು ಹುಳ ಹೊಕ್ಕಿತ್ತು.. !!.

ನಮ್ಮ ದೇಶದಲ್ಲಿ ಜಮ್ಮು- ಕಾಶ್ಮೀರ ರಾಜ್ಯ ಹೊರತುಪಡಿಸಿ ಬೇರೆ ಯಾವ ರಾಜ್ಯಕ್ಕೂ ತನ್ನದೇ  ಆದ ಧ್ವಜವಿಲ್ಲ. ರಾಷ್ಟ್ರೀಯ ಧ್ವಜದಡಿ ನಾವೆಲ್ಲ ಒಂದು . ಹಾಗಿದ್ದರು ಕರ್ನಾಟಕವೇಕೆ ಅಧಿಕೃತವಾಗಿ ಅಲ್ಲದಿದ್ದರು ತನ್ನದೇ ಆದ ಬೇರೆ ಧ್ವಜವನ್ನು ಇಟ್ಟುಕೊಂಡಿತು?. ಯಾವುದೇ ಇತರ ರಾಜ್ಯಗಳಿಗೆ ಹೋಲಿಸಿದರೆ ನಾವು ಸುಮಾರು ಆರು ನೆರೆ ರಾಜ್ಯಗಳ ಜೊತೆ ನಮ್ಮ ಸರಹದ್ದನ್ನು ಹಂಚಿಕೊಳ್ಳುತ್ತೇವೆ ( ತೆಲಂಗಾಣವನ್ನೂ ಸೇರಿಸಿ ) ಹಾಗಾಗಿ ಬಹುಶಃ ಕರ್ನಾಟಕದ ಏಕೀಕರಣದ ಪೂರ್ವದ ಚಳವಳಿಗಳಲ್ಲಿ ಕನ್ನಡ ಮಾತಾಡುವ ಜನರನ್ನು ಒಂದೆಡೆ ಸೇರಿಸಲು ಒಂದು ಧ್ವಜದ ಅವಶ್ಯಕತೆಯನ್ನು ಆಗಿನ ಕನ್ನಡ ಚಳವಳಿಗಾರರಾದ ಎಮ್ .ಎ ರಾಮಮೂರ್ತಿ , ಆರ್ . ಹೆಚ್ ದೇಶಪಾಂಡೆ , ಉಮೇಶ್ ರಾವ್,ಆಲೂರು ವೆಂಕಟ ರಾವ್ , ಗುದ್ಲಪ್ಪ ಹಳ್ಳಿಕೆರೆ ಮುಂತಾದವರು ಮನಗಂಡಿರಬೇಕು .

ಒಂದು ಪ್ರದೇಶಕಷ್ಟೇ ಸೀಮಿತವಾದ ಚಳವಳಿಗಳಿಗೆ ರಾಷ್ಟ್ರಧ್ವಜವನ್ನು ಬಳಸುದು ಅಷ್ಟು ಸಮಂಜಸವಲ್ಲ. ಉದಾಹರಣೆಗೆ , ಗೋಕಾಕ್ ಚಳವಳಿ ,ಹೈದರಬಾದ್ -ಕರ್ನಾಟಕ ಚಳವಳಿಗಳಲ್ಲಿ ಅಥವಾ ಇನ್ನಾವುದೋ ಎರಡು ರಾಜ್ಯಗಳ ನಡುವಿನ ಸಮಸ್ಯೆಗಳಾದ , ಗಡಿಹಂಚಿಕೆ, ನೀರು ಹಂಚಿಕೆ ಇತ್ಯಾದಿ ಹೋರಾಟಗಳಲ್ಲಿ ರಾಷ್ಟ್ರ ಧ್ವಜ ಉಪಯೋಗಿಸಿದರೆ ಅದಕ್ಕೆ ಅರ್ಥವಿರುವುದಿಲ್ಲ. ಒಂದು ಸೀಮಿತ ಪ್ರದೇಶದ ಹಿತಾಸಕ್ತಿಗೆ ಅನುಗುಣವಾಗಿ  ಆ ಪ್ರದೇಶದ ಸಮ ಮನಸ್ಕ ಜನರನ್ನು ಒಂದುಗೂಡಿಸಬೇಕಾಗುತ್ತದೆ , ಇಂಗ್ಲೆಂಡಿನ ಧ್ವಜ ಹಿಡಿದು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕೆ ಹೋರಾಡಿದರೆ ಸ್ವಾತಂತ್ರ್ಯ ಸಿಗುತಿತ್ತೇ ?.

ಹಾಗೆಂದ ಮಾತ್ರಕ್ಕೆ ಒಂದು ರಾಜ್ಯ ತನ್ನದೇ ಆದ ಧ್ವಜ ಬಳಸಿದರೆ ಅದು ರಾಷ್ಟಧ್ವಜವನ್ನು ದಿಕ್ಕರಿಸಿದಂತಲ್ಲ ಅಥವ ರಾಷ್ಟ್ರದ ಏಕತೆಗೆ ಮತ್ತು ಒಗ್ಗಟ್ಟಿಗೆ ದಕ್ಕೆ ತರುತ್ತದೆ ಎಂದಲ್ಲ ಬದಲಾಗಿ ಯಾವುದೇ ಪರಿಸ್ಥಿಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಏಕತೆಯ ಪ್ರಶ್ನೆ ಬಂದಾಗ ಸಮಾನ ಮನೋಭಾವ ಮತ್ತು ಸಮಾನ ಸಂಸ್ಕೃತಿ , ಭಾಷೆ ಹೊಂದಿರುವ ಜನರನ್ನು ಒಂದೆಡೆ ಸೇರಿಸಿ ಹತೋಟಿಯಲ್ಲಿ ಇಟ್ಟುಕೊಳ್ಳುದು ಸುಲಭವಾದೀತು . ಇದೇ ಕಾರಣಕ್ಕೆ ಜಮ್ಮು- ಕಾಶ್ಮೀರ ತನ್ನದೇ ಆದ ಸಂವಿಧಾನ ಮತ್ತು ಧ್ವಜವನ್ನು ಹೊಂದಿದೆ , ಹಾಗಂತ ರಾಷ್ಟ್ರೀಯ ಧ್ವಜ ಮತ್ತು ರಾಷ್ಟ್ರದ ಏಕತೆಯನ್ನು ಪ್ರಶ್ನಿಸುವಂತಿಲ್ಲ

ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೆ ಯಾವ ಧ್ವಜ ಹಾರಿಸುವುದು??

ಕರ್ನಾಟಕದ ಧ್ವಜ ಅನಧಿಕೃತವಾಗಿ ಅಧಿಕೃತವಾಗಿರುವ ಧ್ವಜ (Unofficially official) . ಅರಶಿನ ಕುಂಕುಮ ಎರಡು ಬಣ್ಣವಿರುವ ಧ್ವಜವನ್ನು ೧೯೭೪ ರಿಂದ ಎಲ್ಲ ಕನ್ನಡ ಪರ ಚಳವಳಿಗಳಲ್ಲಿ ಮತ್ತು ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಬಳಸಲಾಗುತ್ತಿದೆ ಆದರೆ ಈ ವರ್ಷ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೂರು ಬಣ್ಣಗಳಾದ  ಅರಶಿನ   , ಬಿಳಿ ಮತ್ತು ಕುಂಕುಮ ಬಣ್ಣವಿರುವ ಮತ್ತು ಜೊತೆಗೆ ಗಂಡಭೇರುಂಡದ  ಚಿಹ್ನೆಯಿರುವ ಧ್ವಜವನ್ನು ವಿನ್ಯಾಸ ಮಾಡಿ ಅದನ್ನು ಕರ್ನಾಟಕದ ಅಧಿಕೃತ ಧ್ವಜವಾಗಿ ಬಳಸಲು ಕೇಂದ್ರದ ಮತ್ತು ಕಾನೂನಿನ ಮೊರೆಹೋಗಿದೆ . ಈ ಬಾರಿ ಯಾವ ಧ್ವಜ ಉಪಯೋಗಿಸುವುದು ಎಂಬುದು ಕೊಂಚ ಗೊಂದಲದ ವಿಷಯವೇ ಸರಿ ಯಾಕೆಂದರೆ ಎರಡೂ ಅಧಿಕೃತವಲ್ಲ.

ಧ್ವಜ ಯಾವುದೇ ಇರಲಿ ಅದು ಮೂಡಿಸುವ ಭಾವನೆ ಮುಖ್ಯವಾದದ್ದು. ಒಂದು ದೇಶವನ್ನು ಮತ್ತದರ ಅಸ್ತಿತ್ವವನ್ನು ಆ ದೇಶದ ಧ್ವಜ ಹೇಗೆ ಪ್ರತಿಬಿಂಬಿಸುವುದೋ ಹಾಗೆ ಒಂದು ರಾಜ್ಯದ ಅಥವಾ ಇನ್ನಾವುದೋ ಒಂದು ಸಂಸ್ಥೆಯ ಧ್ಯೇಯವನ್ನು ಮತ್ತು ಅದರ ಸಂಸ್ಕೃತಿಯನ್ನು ಅವುಗಳ ಧ್ವಜಗಳು ಬಿಂಬಿಸುತ್ತವೆ. ಕನ್ನಡಿಗರು ನಾವು ಜನ ಗಣ ಮನ ರಾಷ್ಟ್ರಗೀತೆಯನ್ನು ಹೇಗೆ ಹಾಡುತ್ತೇವೆಯೋ ಹಾಗೆ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಅಷ್ಟೇ ತನ್ಮಯತೆಯಿಂದ ಹಾಡುತ್ತೇವೆ . ಒಂದು ಹಾಡು , ಒಂದು ಭಾಷೆ , ಒಂದು ಸಂಸ್ಕೃತಿ ಒಂದು ಧ್ವಜ ಇವೆಲ್ಲ ಒಂದು ರಾಜ್ಯದ ಜನತೆಯ ಹೆಮ್ಮೆ ಇವುಗಳೆಲ್ಲ ನಮ್ಮ ಇತಿಹಾಸದ ಸ್ಪಷ್ಟ ಕುರುಹುಗಳು ಹೋರಾಟದ ಸಂಕೇತಗಳು ಮತ್ತು  ವಿಕಾಸದ ಹೆಜ್ಜೆ ಗುರುತುಗಳು ಅಷ್ಟೇ , ಇವುಗಳೆಲ್ಲ ಯಾವತ್ತಿಗೂ ದೇಶದ ಭದ್ರತೆ ಮತ್ತು ಏಕತೆಗೆ ಧಕ್ಕೆತರುವಂತವುಗಳು ಆಗಲಾರವು .

ನಾವು ಈ ವಿಷಯದ ಬಗ್ಗೆ  ಮಾತಾಡುವಾಗ ಬರೀ ಏಕತೆ ಬಗ್ಗೆ ಮಾತಾಡಿದರೆ ತಪ್ಪಾದೀತು, ಜೊತೆಗೆ ನಮ್ಮ ವೈವಿಧ್ಯತೆ ಬಗ್ಗೆಯು ಮಾತಾಡಬೇಕಾಗುತ್ತದೆ, ನಮ್ಮದು ವಿವಿಧತೆಯಲ್ಲಿ ಏಕತೆ. ಇದನ್ನೆಲ್ಲಾ ಬದಲಾಯಿಸಿ ಯಾವುದೊ ಪಾಶ್ಚಿಮಾತ್ಯ ದೇಶದ ಹಾಗೆ ಅಥವ ಇನ್ನಾವುದೋ ಕಮ್ಯುನಿಸ್ಟ್ ರಾಷ್ಟ್ರಗಳ ಹಾಗೆ ಕೇವಲ ಏಕತೆಯನ್ನು  ಸಾಧಿಸಹೊರಟರೆ ದೇಶದ ಸಂಸ್ಕೃತಿಗೆ ಅದರ ವೈವಿಧ್ಯತೆಗೆ ಭಾರಿ  ಪೆಟ್ಟು ಆದೀತು ಅಷ್ಟೇ ಅಲ್ಲದೆ ಏಕತೆಗೆ ಭಂಗವು ಆದೀತು . ದೇಶದ ಸಂವಿಧಾನ  ಬರೆದ ಸಮಯದ ಪರಿಸ್ಥಿತಿಗಳು ಈಗ ಇಲ್ಲ ಹಾಗಾಗಿ ದೇಶದ ಬುದ್ದಿಜೀವಿಗಳು, ಆಡಳಿತಯಂತ್ರ ನಡೆಸುವವರು ದೇಶದ ಅಭಿವೃದ್ಧಿಯ ಹಿತದೃಷ್ಟಿ ಮತ್ತು ಜನರ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು, ಇಲ್ಲದಿದ್ದರೆ ಕೆಲವರು ಈ ವಿಷಯಗಳನ್ನು ತಮ್ಮ ರಾಜಕೀಯ ಲಾಭಗಳಿಗೆ ಉಪಯೋಗಿಸಿಕೊಂಡು ಇಂತಹ ಬೇಡಿಕೆಗಳ  ನಿಜ ಅರ್ಥ ಬದಲಾಗುವ ದುರದೃಷ್ಟ ಒದಗಿಬರಬಹುದು .

ಮತ್ತೆ ನವೆಂಬರ್ ಒಂದು ಬರಲಿದೆ . ಸಂದಿಗ್ದಗಳು , ದ್ವಂದ್ವಗಳು ನಮ್ಮ ಆಚರಣೆಗಳಾಗದಿರಲಿ ಬದಲಾಗಿ ನಮ್ಮ ಇತಿಹಾಸ , ಹೋರಾಟ, ನಾಡು ನುಡಿ ಸಂಸ್ಕೃತಿ ಸಾಹಿತ್ಯಗಳನ್ನು ತಿಳಿದುಕೊಂಡು  ಮತ್ತು ಅದನ್ನು ಇತರರಿಗೂ ತಿಳಿಸಿ ಅದರ ಅಭಿವೃದ್ಧಿಗೆ ಕೆಲಸಮಾಡಬೇಕು .

ಕೊನೆಯದಾಗಿ ,

ಗೊತ್ತೇ ನಿನಗೆ ,
ಕುವೆಂಪು ,ಬೇಂದ್ರೆ ಅಡಿಗ ?
ಗೊತ್ತಿಲ್ವೆ ,
ನೀ ಯಾವ ಸೀಮೆ ಕನ್ನಡಿಗ !!.














----------------------------------------------------------------ಸುಕೇಶ್ ಪೂಜಾರಿ 




Wednesday, October 17, 2018

ಚಪ್ಪಲಿ

ನಮ್ಮನ್ನು  ಕೆಲವರು
ಹವಾನಿಯಂತ್ರಿತ ಅಂಗಡಿಯ
ಗಾಜಿನ ಒಳಗೆ ಇಟ್ಟು
ಮಾರುವರು,
ಇನ್ನು ಕೆಲವರು
ಮುಚ್ಚಿದ ಯಾವುದೋ
ಅಂಗಡಿಯ ಎದುರೊ
ಅಥವಾ ಫೂಟ್ಪಾತ್ ನ ಮೇಲೆ .

ನಾವು ಕೂಡ ಹಾಗೆ
ಯಾರದೋ ಕಾಲುಗಳಿಗೆ ಸಿಕ್ಕಿಕೊಂಡು,
ಕೆಲವೊಂದು ,
ಹವಾನಿಯಂತ್ರಿತ ಅಂಗಡಿಯಿಂದ
ವಾತಾನುಕೂಲ ಕಾರುಗಳಲ್ಲಿ
ಹವಾನಿಯಂತ್ರಿತ ಆಫೀಸ್ ಗೆ.
ಇನ್ನು ಕೆಲವು,
ಫುಟ್ಪಾತ್ನಲ್ಲಿ ಅವಸರ
ಅವಸರವಾಗಿ ಸಿಕ್ಕಿಸಿಕೊಂಡು
ಮತ್ತದೇ ಫುಟ್ಪಾತ್ ಅಳೆಯುತ್ತೇವೆ .
ಹವಾಮಾನ ಪ್ರತಿಕೂಲ
ಎಲ್ಲವು ಜನ್ಮದ ಮೂಲ !!.

ಮೊನ್ನೆ ಅದಾವುದೊ
ದೇವಸ್ಥಾನದ ಎದುರು
ಹಾಗೆ ನಿಂತಿದ್ದೆವು
ಒಂದರ ಜೊತೆ ಇನ್ನೊಂದು.
ಕೆಲವೊಂದು ಹವಾನಿಯಂತ್ರಿತ
ಕೊಠಡಿಯಿಂದ ಬಂದವುಗಳು
ಇನ್ನು ಕೆಲವು ಫುಟ್ಪಾತ್ ಅಲೆದಾಡಿದವುಗಳು.
ಆತನ ಮುಂದೆ
ಎಲ್ಲವು ಒಂದೇ... !!.

ಎಲ್ಲರು ಒಂದೊಂದು
ಕಾಲು ಹತ್ತಿದವು
ಕಾಲ್ಕಿತ್ತವು.
ನಾ ನನ್ನ ಕಾಲಿಗೆ ಕಾಯುತಿದ್ದೆ,
ಕಾಲು ಹವಾನಿಯಂತ್ರಣ
ಬೇಡುತಿತ್ತು,
ನಾ ಫುಟ್ಪಾತ್ ಅಳೆಯುತ್ತಿದ್ದೆ
ಚಿಂದಿ ಆಗುವವರೆಗೆ ,
ಯಾರೋ ನನ್ನ ಚಿಂದಿ ಆಯುವವರೆಗೆ.... !!.



---------------------------------------------------------ಸುಕೇಶ್ ಪೂಜಾರಿ (ಸುಕೇಪು)



ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...